Saturday, September 5, 2009

ಗಿಳಿಯು ಪಂಜರದೊಳಿಲ್ಲ !

ಆಘಾತಗಳೆಲ್ಲವೂ ಯಾಕೆ ಅನಿರೀಕ್ಷಿತವಾಗಿರುತ್ತವೋ? ಅನಿರೀಕ್ಷಿತವಾಗಿರದಿದ್ದರೆ ಅದನ್ನು ಆಘಾತ ಎನ್ನುವುದಿಲ್ಲವೇ? ಅಂತೂ ಅವತ್ತಿನ ಮಟ್ಟಿಗೆ ನನ್ನ ಗ್ರಹಚಾರ ಸರಿ ಇರಲಿಲ್ಲ.

ಬೇಸಿಗೆಯಲ್ಲಿ ಮಧ್ಯಾಹ್ನ ಮಾತ್ರ ಬಿಸಿಲು ಬೀಳುವ, ಮಳೆಗಾಲದಲ್ಲಿ ಒಂದು ಕ್ಷಣವೂ ಮಳೆ ನಿಲ್ಲದ, ಅಚ್ಚ ಹಸಿರಿನ ಬೆಟ್ಟಗಳ ನಡುವಿನ ಹಳ್ಳಿ ನಮ್ಮದು. ವರ್ಷದಲ್ಲಿ ಹೆಚ್ಚಿನ ಕಾಲ ಬೆಳಿಗ್ಗೆ ಹತ್ತು ಘಂಟೆಯವರಿಗೂ ಮಂಜು ಮುಸುಕಿರುತ್ತದೆ. ಅಡಿಗೆಗೆ ಗೋಬರ್ ಗ್ಯಾಸ್ ಬಳಸುವಷ್ಟು ಮುಂದುವರಿದ, ಆದರೆ ಸ್ನಾನದ ಒಲೆಗೆ ಇನ್ನೂ ಉರುವಲನ್ನೇ ಬಳಸುವಷ್ಟು ಹಿಂದುಳಿದಿರುವ ಊರು. ಅಚ್ಚ ಹಸಿರಿನ ಹಿನ್ನೆಲೆಗೆ, ತೆಳ್ಳಗೆ ಮುಸುಕಿದ ಮಂಜಿನ ಮಧ್ಯೆ, ಉರುವಲಿನಿಂದ ಏಳುವ ನೀಲಿ ಹೊಗೆ ಸೇರಿ ಪ್ರತಿ ಮುಂಜಾನೆ ಒಂದು ಅದ್ಭುತ ದೃಶ್ಯ ಸೃಷ್ಟಿಯಾಗುತ್ತದೆ. ಊರಿನ ಹಿಂದೆ ಒಂದು ಮೈಲಿ ದೂರದಲ್ಲಿ ಬಸ್ಸಿನ ರಸ್ತೆಯೂ, ಊರಿನ ಮುಂದೆ ಒಂದು ಮೈಲಿ ದೂರದಲ್ಲಿ ರೈಲ್ವೆ ಹಳಿಯೂ, ನಿಲ್ದಾಣವೂ ಇದೆ. ಇರುವ ಹತ್ತೇ ಮನೆಗಳಲ್ಲಿ ಇಪ್ಪತ್ತು ಕಾದಂಬರಿಗಳಿಗಾಗುವಷ್ಟು ತರಹೇವಾರಿ ಪಾತ್ರಗಳಿವೆ.